Header Ads

ಕಂದಾವರದಲ್ಲಿ ವಿಜಯನಗರ ಸಾಮ್ರಾಜ್ಯದ ಶಾಸನ ಪತ್ತೆ


ಕಂದಾವರದಲ್ಲಿ ವಿಜಯನಗರ ಸಾಮ್ರಾಜ್ಯದ ಶಾಸನ ಪತ್ತೆ


ಕುಂದಾಪುರ: ತಾಲೂಕಿನ ಕಂದಾವರದಲ್ಲಿ ವಿಜಯನಗರ ಸಾಮ್ರಾಜ್ಯದ ಖ್ಯಾತ ಚಕ್ರವರ್ತಿ ಕೃಷ್ಣದೇವರಾಯನ ಶಾಸನ ಪತ್ತೆಯಾಗಿದೆ.  ಈ ಬಗ್ಗೆ ಮಾಧ್ಯಮಕ್ಕೆ ಶಿರ್ವದ ಮೂಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜಿನ ಸಹ ಪ್ರಾಧ್ಯಾಪಕ, ಪ್ರೊ| ಟಿ. ಮುರುಗೇಶಿ ಮಾಹಿತಿ ನೀಡಿದ್ದಾರೆ.

ಶಾಸನವನ್ನು ಆಯತಾಕಾರದ ಕಲ್ಲಿನ ಮೇಲೆ ಬರೆಯಲಾಗಿದ್ದು, ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಯಲಾಗಿದೆ. ಶಾಸನದ ಪ್ರತೀ ಸಾಲನ್ನು ಸೊನ್ನೆಯೊಂದಿಗೆ ಆರಂಭಿಸಲಾಗಿದೆ.

ಕಂದಾವರದಲ್ಲಿ ವಿಜಯನಗರ ಸಾಮ್ರಾಜ್ಯದ ಶಾಸನ ಪತ್ತೆ
ಕಂದಾವರದಲ್ಲಿ ದೊರೆತ ಶಾಸನ

ಸಾಮಾನ್ಯವಾಗಿ ವಿಜಯ ನಗರದ ಶಾಸನಗಳು ದೇವತಾ ಶ್ಲೋಕದೊಂದಿಗೆ ಆರಂಭವಾಗುವುದು ವಾಡಿಕೆ. ಆದರೆ ಈ ಶಾಸನ ಕೇವಲ ಸ್ವಸ್ತಿಶ್ರೀ ಎಂಬ ಮಂಗಳ ಪದದೊಂದಿಗೆ ಆರಂಭವಾಗಿದ್ದು, ಶಾಸನವನ್ನು 30 ಸಾಲುಗಳಲ್ಲಿ ಬರೆಯಲಾಗಿದೆ. ಶಾಸನ ಜಯಾಭ್ಯುದಯ ಶಾಲಿವಾಹನ ಶಕ ವರುಷ ಎಂದು ಕಾಲಮಾನದ ಉಲ್ಲೇಖದೊಂದಿಗೆ ಆರಂಭವಾಗಿದ್ದರೂ ಕಾಲವನ್ನು ಉಲ್ಲೇಖೀಸಿದ ಭಾಗ ಸಂಪೂರ್ಣ ಅಳಿಸಿ ಹೋಗಿದೆ.

ಶಾಸನದಲ್ಲಿ ಶುಕ್ಲ ಸಂವತ್ಸರ ಮಾಘ ಮಾಸ ಎಂಬ ಉಲ್ಲೇಖವಿರುವುದರಿಂದ, ಶಾಸನದ ಕಾಲ ಕ್ರಿ.ಶ. 1509ಕ್ಕೆ ಸರಿಹೊಂದುತ್ತದೆ. "ಕೃಷ್ಣರಾಯ ಮಹಾರಾಯರು ಸಕಲ ವಂರ್ನಶ್ರಮಗಳನು ಪ್ರತಿಪಾಲಿಸುತಿಹ ಕಾಲದಲು' ಎಂಬ ಉಲ್ಲೇಖವಿರುವುದರಿಂದ ಈ ಶಾಸನ ಕೃಷ್ಣದೇವರಾಯನ ಆಳ್ವಿಕೆಯ ಪ್ರಥಮ ವರ್ಷಕ್ಕೆ ಸೇರಿದ ಶಾಸನ ಎಂದು ತಿಳಿಯುತ್ತದೆ. ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಬಾರಕೂರು ರಾಜ್ಯವನು ಮಲ್ಲಪ್ಪ ಒಡೆಯರು ಆಳ್ವಿಕೆ ನಡೆಸುತ್ತಿದ್ದನೆಂದು ಶಾಸನ ತಿಳಿಸುತ್ತದೆ.

ಕೃಷ್ಣ ದೇವರಾಯನಿಗೆ ಶತ್ರು ಕ್ಷಯ, ಮಿತ್ರಾರ್ಜಿತವಾಗಿ, ಆಯುರಾರೋಗ್ಯ ಐಶ್ವರ್ಯ ಪ್ರಾಪ್ತವಾಗಲೆಂದು ಸ್ಕಂದಪುರದ ಅಂದರೆ ಈಗಿನ ಕಂದಾವರದ ಕಾರ್ತಿಕ ದೇವರ ಕಾರ್ತಿಕ ಪೂಜೆಗೆ ಕೊಟ್ಟ ದಾನವನ್ನು ಶಾಸನದಲ್ಲಿ ದಾಖಲಿಸಲಾಗಿದೆ. ಇದರೊಂದಿಗೆ ಬಸವರಸ ಒಡೆಯರು ಕಾರ್ತಿಕ ದೇವರ ಅಮೃತ ಪಡಿಗೆ ನೀಡಿದ ದಾನವನ್ನು ಶಾಸನದಲ್ಲಿ ದಾಖಲಿಸಲಾಗಿದೆ. ಶಾಸನದ ಕೊನೆಯಲ್ಲಿ ಗಣಪತಿ ಮತ್ತು ಶಿವನ ಸ್ತುತಿಯಿದ್ದು, ಸಂಸ್ಕೃತದಲ್ಲಿ ದಾನವನ್ನು ಕಾಪಾಡಿದವರಿಗೆ ಅಚ್ಯುತ ಪದ ದೊರೆಯುತ್ತದೆ ಎಂದು ಹೇಳಲಾಗಿದೆ.

ಈ ಶಾಸನಾಧ್ಯಯನದಲ್ಲಿ ದೇಗುಲದ ಆಡಳಿತ ಮೊಕ್ತೇಸರ ಸುಬ್ರಾಯ ಉಡುಪ, ಕಂದಾವರದ ಡಾ| ಬಿ. ವೆಂಕಟರಮಣ ಉಡುಪ, ಮಾಧವ ಅಡಿಗ ಅವರು ಸಹಕರಿಸಿದ್ದಾರೆ ಎಂದು ಎಂಎಸ್‌ಆರ್‌ಎಸ್‌ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಪ್ರೊ| ಟಿ. ಮರುಗೇಶಿ ತಿಳಿಸಿದ್ದಾರೆ.


ಸುದ್ದಿ ಕೃಪೆ: ಕುಂದಾಪ್ರ ಡಾಟ್ ಕಾಮ್

Theme images by sndr. Powered by Blogger.